
ಇವತ್ತು ಶಾಲೆಯಲ್ಲಿ ನೀನೇನು ಪ್ರಶ್ನೆ ಕೇಳಿದೆ? – ಕೈಪಿಡಿ 2 “ಇವತ್ತು ಶಾಲೆಯಲ್ಲಿ ನೀನೇನು ಪ್ರಶ್ನೆ ಕೇಳಿದೆ? – ಮಗುವಿನ ಕಲಿಕೆ ಕುರಿತು ಒಂದು ಕೈಪಿಡಿ” ಎನ್ನುವ ಮೌಲಿಕವಾದ ಎರಡು ಪುಸ್ತಕಗಳನ್ನು ಕಮಲ ವಿ. ಮುಕುಂದ ಅವರು ನೀಡಿದ್ದಾರೆ. ಹಾಗೆಯೇ ಬೇಡಿಕೆಯಿರುವ ಈ ಪುಸ್ತಕಗಳನ್ನು ಮುದ್ರಿಸಿ ಕನ್ನಡದ ಓದುಗರಿಗೆ ನವಕರ್ನಾಟಕ ಪಬ್ಲಿಕೇಷನ್ರವರು ದೊರಕಿಸಿಕೊಟ್ಟಿದ್ದಾರೆ. ಕಮಲ ಅವರು ರಚಿಸಿರುವ ಈ ಎರಡು ಪುಸ್ತಕಗಳು ಜಾಗತಿಕ ಸಂಶೋಧನೆ ಮತ್ತು ವಾಸ್ತವಿಕ ಶಾಲಾ ಸನ್ನಿವೇಶಗಳಿಂದ ಮಿಳಿತಗೊಂಡು ವಿದ್ಯಾರ್ಥಿಗಳ ಸಂಕೀರ್ಣವಾದ ಮನಸ್ಸಿನ ವಲಯ ಮತ್ತು ಅದರ ಮೇಲೆ ಪರಿಣಾಮ ಬೀರುವ ಅಂಶಗಳ ಮೇಲೆ ಬೆಳಕು ಚೆಲ್ಲುತ್ತವೆ. ಕೈಪಿಡಿ | ಮಿದುಳಿನ ರಚನೆ ಮತ್ತು ಕಾರ್ಯ, ಕಲಿಕೆ, ಜ್ಞಾಪಕಶಕ್ತಿ, ಬುದ್ದಿಮತ್ತೆ, ಪ್ರಕೃತಿ ಮತ್ತು ಪೋಷಣೆ, ಮಗುವಿನ ವಿಕಾಸ ಮತ್ತು ಭಾವನಾತ್ಮಕ ಆರೋಗ್ಯದ ಬಗ್ಗೆ ಅದ್ಭುತವಾದ ಸಂಗತಿಗಳನ್ನು ಮನೋವೈಜ್ಞಾನಿಕ ದೃಷ್ಟಿಕೋನದಿಂದ ಅನಾವರಣಗೊಳಿಸುತ್ತದೆ. ಕೈಪಿಡಿ 2 ಈ ಚಿಂತನೆಗಳನ್ನು ಮುಂದುವರೆಸುತ್ತಾ, ಮಗುವಿನ ಬೆಳವಣಿಗೆಯ ಹಂತ ಮತ್ತು ಕಲಿಕೆಯ ಸಾಮರ್ಥದ ನಡುವಿನ ಸಂಬಂಧ, ಚಂಚಲ ಮನಸ್ಸಿನ ಮಕ್ಕಳಿಗೆ ತರಗತಿಯಲ್ಲಿ ಗಮನ ಕೊಡಲಾಗದಿರಲು ಇರುವ ಕಾರಣ, ಕಲಿಕೆಯ ವಿಭಿನ್ನ ಶೈಲಿಗಳು ಮತ್ತು ಪ್ರತಿ ಶೈಲಿಗೆ ತಕ್ಕಂತೆ ಮಗುವಿನ ವಿಂಗಡನೆಯ ಸಾಧ್ಯತೆ ಹಾಗೂ ಮಕ್ಕಳ ಕಲಿಕೆಯನ್ನು ಉತ್ತಮಪಡಿಸಲು ಶಿಕ್ಷಕರ ಮಾರ್ಗದರ್ಶನದ ಬಗೆ ಮುಂತಾದ ಗಹನವಾದ ಪ್ರಶ್ನೆಗಳ ಸುತ್ತಲಿನ ವಿಚಾರಧಾರೆ ಮತ್ತು ಒಳನೋಟಗಳನ್ನು ತೆರೆದಿಡುತ್ತವೆ. ಈ ಹೊತ್ತಗೆಗಳು ಶಿಕ್ಷಕರು, ಪೋಷಕರು, ಶಿಕ್ಷಣ ರಂಗದ ಕಾರ್ಯಕರ್ತರು, ಮನೋವಿಜ್ಞಾನಿಗಳು ಮತ್ತು ಆಪ್ತ ಸಮಾಲೋಚಕರಿಗೆ ಹೊಸ ಬೆಳಕನ್ನು ಚೆಲ್ಲಬಲ್ಲ ಕೈಪಿಡಿಗಳಾಗಿವೆ. https://navakarnataka.com/ivattu-shaleyalli-neenenu-prashne-kelide-vol-2azim-premji-university