ಸಾಂಸ್ಕೃತಿಕ ಸಂವಿಧಾನ ಶಿಲ್ಪಿ ಬಸವಣ್ಣ

ಸಮಾಜ ವಿಜ್ಞಾನಿಯ ದೃಷ್ಟಿಕೋನವಿರುವ ರಂಜಾನ್ ದರ್ಗಾ ಅವರ ಚಿಂತನೆಗಳ ಕೇಂದ್ರ ಕಾಳಜಿ ಶರಣ ಸಾಹಿತ್ಯ. ಸಮತಾವಾದ ಮತ್ತು ಸೂಫಿ ವಿಚಾರಗಳ ಹಿನ್ನೆಲೆಯಲ್ಲಿ ವಚನ ಚಿಂತನೆಗಳಿಗೆ ಹೊಸ ಹೊಳವು ನೀಡುವುದರಲ್ಲಿ ತಲ್ಲೀನರಾಗಿದ್ದಾರೆ. ಪ್ರಸ್ತುತ ಇವರ ‘ಸಾಂಸ್ಕೃತಿಕ ಸಂವಿಧಾನ ಶಿಕ್ಷೆ ಬಸವಣ್ಣ’ ಕೃತಿ ಬಸವಣ್ಣ ಹಾಗೂ ಶರಣ ಸಂಕುಲದ ಚಿಂತನೆ, ಚಳವಳಿಯನ್ನು ಅಂತರ್‌ಶಿಸ್ತೀಯ ವಿಶ್ಲೇಷಣೆಗೆ ಒಳಪಡಿಸಿದೆ. ಸಮಸಮಾಜದ ಕನಸುಗಳೊಂದಿಗೆ ಮಾನವ ಘನತೆಯ ಬದುಕಿಗೆ ಶರಣರು ಮಾಡಿದ ಚಿಂತನೆ, ಹೋರಾಟ ಇಂದಿಗೂ ಪ್ರಸ್ತುತವಾಗಿವೆ ಎಂದು ಸಾಬೀತುಪಡಿಸುವ ಈ ಕೃತಿಯನ್ನು ನವಕರ್ನಾಟಕ ಪ್ರಕಾಶನ ಓದುಗರ ಕೈಗಿಡುತ್ತಿದೆ. ಕರ್ನಾಟಕ ಸರ್ಕಾರದ ರಾಷ್ಟ್ರೀಯ ಬಸವ ಪುರಸ್ಕಾರ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ ಮುಂತಾದ 55 ಪ್ರಶಸ್ತಿಗಳಿಗೆ ಭಾಜನರಾದ ರಂಜಾನ್ ದರ್ಗಾ ಅವರು ಬಂಡಾಯ ಸಾಹಿತ್ಯ ಪರಂಪರೆಯ ಶಕ್ತಿಶಾಲಿ ಕವಿಗಳಲ್ಲಿ ಒಬ್ಬರು. ವಿಜಾಪುರ ನಗರದಲ್ಲಿ 20.6.1951ರಂದು ಜನಿಸಿದ ದರ್ಗಾ ಅವರು. ಪ್ರಜಾವಾಣಿ ದಿನಪತ್ರಿಕೆಯಲ್ಲಿ ಸುದ್ದಿ ಸಂಪಾದಕರಾಗಿ ನಿವೃತ್ತಿ ಹೊಂದಿದ ನಂತರ ಧಾರವಾಡದಲ್ಲಿ ನೆಲೆಸಿದ್ದಾರೆ. ‘ಕಾವ್ಯ ಬಂತು ಬೀದಿಗೆ’ (ಕಾವ್ಯ-1978), ‘ಹೊಕ್ಕಳಲ್ಲಿ ಹೂವಿದೆ’ (ಕಾವ್ಯ), ‘ನೆಲ್ಸನ್ ಮಂಡೇಲಾ’, ‘ವಚನ ಬೆಳಕು’, ‘ಬಸವಧರ್ಮದ ವಿಶ್ವ ಸಂದೇಶ’, ‘ಬಸವ ಪ್ರಜ್ಞೆ’, ‘ಬಸವಣ್ಣ ಮತ್ತು ಅಂಬೇಡ್ಕರ್’, ‘ಮೂರ್ತ ಮತ್ತು ಅಮೂರ್ತ’ ಮುಂತಾದ 25ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ಕೇಂದ್ರೀಯ ವಿಶ್ವವಿದ್ಯಾಲಯವೂ ಸೇರಿದಂತೆ ರಾಜ್ಯದ 12 ವಿಶ್ವವಿದ್ಯಾಲಯಗಳ ಕಾಲೇಜುಗಳಿಗೆ ಇವರ ಪುಸ್ತಕ, ಲೇಖನ ಮತ್ತು ಕವಿತೆಗಳು ಪಠ್ಯಗಳಾಗಿವೆ. ರಷ್ಯಾ, ಉಜ್‌ಬೆಕಿಸ್ತಾನ್, ನೆದ‌ಲ್ಯಾಂಡ್ಸ್, ಫ್ರಾನ್ಸ್, ಲೆಬನಾನ್, ಕೆನಡಾ, ಅಮೆರಿಕಾ, ಆಸ್ಟ್ರೇಲಿಯಾ, ಯು.ಎ.ಇ. (ದುಬೈ, ಅಬುಧಾವಿ), ಇಂಡೋನೇಷ್ಯಾ (ಬಾಲಿ), ಶ್ರೀಲಂಕಾ ಮುಂತಾದ ದೇಶಗಳಲ್ಲಿ ಶರಣ ಸಂಸ್ಕೃತಿ, ಶಾಂತಿ ಮತ್ತು ಮಾನವ ಏಕತೆ ಕುರಿತು ಪ್ರಬಂಧ ಮಂಡನೆ ಮಾಡಿದ್ದಾರೆ.

Leave a Reply

Your email address will not be published. Required fields are marked *